ಎಮರ್ಜೆನ್ಸಿ ರಾಜ್ಯ ಬಜೆಟ್: ಸಿಎಂ ಸಿದ್ದರಾಮಯ್ಯ
2024-25ನೇ ಸಾಲಿನ ಬಜೆಟ್ ತಯಾರಿ ಪ್ರಕ್ರಿಯೆ ಶುರು ವಾಗಿದ್ದು, ಈ ಬಾರಿ ತುರ್ತು ಪ್ರಸ್ತಾವನೆಗಳಿಗಷ್ಟೇ ಅವಕಾಶ. ತೀರಾ ಅಗತ್ಯಗಳಿಗಷ್ಟೆ ಪ್ರಸ್ತಾವ ಸಲ್ಲಿಸು ವಂತೆ ಆರ್ಥಿಕ ಇಲಾಖೆಯು ಎಲ್ಲ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗ್ಯಾರಂಟಿಗಳ ಅನುಷ್ಠಾನದ ನಡುವೆ ಉಳಿದ ಯೋಜನೆಗಳಿಗೆ ಹಣಕಾಸು ಹೊಂದಿಸುವುದು ಸವಾಲಾಗಿರುವುದೇ ಇದಕ್ಕೆ ಕಾರಣ. ಮುಂದಿನ ಆರ್ಥಿಕ ವರ್ಷಕ್ಕೆ ದಾಖಲೆ 3.70 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ನಿರೀಕ್ಷೆಯಿದ್ದು, ಸಾಲವು ಲಕ್ಷ ಕೋಟಿ ರೂ. ದಾಟುವ ಲಕ್ಷಣಗಳಿವೆ. ಹಾಗಿದ್ದರೂ ಬಹುತೇಕ ಇಲಾಖೆಗೆ ಶೇ.5ರಿಂದ ಶೇ.10ರಷ್ಟು ಹೆಚ್ಚುವರಿ ಅನುದಾನ ಸಿಗುವುದು ಅನುಮಾನ. ಏಕೆಂದರೆ ಐದೂ ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ 58,000 ಕೋಟಿ ರೂ. ವೆಚ್ಚದ ಅಂದಾಜಿದೆ. ಹಾಗಾಗಿ ಬಜೆಟ್ ಗಾತ್ರ ಹಿಗ್ಗಿದರೂ ಅದರ ಬಹುಪಾಲು ಮೊತ್ತ ಗ್ಯಾರಂಟಿಗೆ ವಿನಿಯೋಗವಾಗುವುದು - ಗ್ಯಾರಂಟಿ. ಪರಿಣಾಮವಾಗಿ ಪ್ರಸಕ್ತ ಸಾಲಿನ ಬಜೆಟ್ ಅನ್ನೇ ಹೋಲುವಂತಹ ಹೊಸ ಬಜೆಟ್ ಮಂಡನೆ ನಿರೀಕ್ಷೆ ಇದೆ.
ಸಿಎಂ ಸಿದ್ದರಾಮಯ್ಯ ಅವರು 2023-24ನೇ ಸಾಲಿಗೆ 14ನೇ ಬಾರಿ ಮಂಡಿಸಿದ ಬಜೆಟ್ ದಾಖಲೆ 3.27 ಲಕ್ಷ ಕೋಟಿ ರೂ. ಗಾತ್ರದ್ದಾಗಿತ್ತು. ಶೇ.13ರ ಬೆಳವಣಿಗೆಯಂತೆ ಮುಂದಿನ ಸಾಲಿಗೆ 3.60- 3.70 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ಸಾಧ್ಯತೆ ಇದೆ. ಗಾತ್ರ ಹಿಗ್ಗುವುದು ಆಶಾದಾಯಕ ಎನಿಸಿದರೂ ಯೋಜನಾ ವೆಚ್ಚಕ್ಕೆ ಹೆಚ್ಚಿನ ಹಣ ಸಿಗುವ ಸಂಭವ ಕಡಿಮೆ ಎಂಬಂತಿದೆ.
#ತುರ್ತು ಅಗತ್ಯ ಪ್ರಸ್ತಾವಕ್ಕೆ ಒತ್ತು
ಸಿಎಂ ಸಿದ್ದರಾಮಯ್ಯ ಅವರು ಜ.20ರಿಂದ ಬಜೆಟ್ ಪೂರ್ವಭಾವಿ ಸಭೆ ಆರಂಭಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಆರ್ಥಿಕ ಇಲಾಖೆಯು ಇಲಾಖಾವಾರು ಸಭೆ ನಡೆಸಿದೆ. ಈ ಸಭೆಗೂ ಮೊದಲೇ ತುರ್ತು ಅಗತ್ಯವಿರುವ ಪ್ರಸ್ತಾವವನ್ನಷ್ಟೇ ಸಲ್ಲಿಸಬೇಕು ಹಾಗೂ ತಕ್ಷಣಕ್ಕೆ ಅಗತ್ಯವಿಲ್ಲದ, ಮುಂದೂಡಬಹುದಾದ ಯೋಜನೆ, ಪ್ರಸ್ತಾವಗಳನ್ನು ಸಲ್ಲಿಸದಂತೆ ಆರ್ಥಿಕ ಇಲಾಖೆ ಖಡಕ್ ಸೂಚನೆ ನೀಡಿತ್ತು. ಹೆಚ್ಚು ಅನುದಾನದ ನಿರೀಕ್ಷೆಯಲ್ಲಿ ಸಾಕಷ್ಟು ಪ್ರಸ್ತಾವ ಸಲ್ಲಿಸುವ ಬದಲಿಗೆ 2024-25ನೇ ಸಾಲಿನಲ್ಲಿ ಆರಂಭಿಸಲೇಬೇಕಾದ ತುರ್ತು ಅಗತ್ಯದ ಪ್ರಸ್ತಾವಗಳನ್ನಷ್ಟೇ ಸಲ್ಲಿಸಲು ಸೂಚಿಸಲಾಗಿತ್ತು. ಆ ಮೂಲಕ ಪ್ರಸ್ತಾಪದ ಹಂತದಲ್ಲೇ ಅನಗತ್ಯ ಕೆಲಸಗಳಿಗೆ ಕಡಿವಾಣ ಹಾಕಿದಂತಾಗಿದೆ ಎಂದು ಮೂಲಗಳು ಹೇಳಿವೆ.
#ಅನುದಾನ ಹಂಚಿಕೆ ಹೆಚ್ಚಳ ಅನುಮಾನ
ಸರಕಾರಿ ನೌಕರರ ವೇತನ, ಪಿಂಚಣಿ, ನಾನಾ ಸಬ್ಸಿಡಿಗಳು, ಸಾಮಾಜಿಕ ಭದ್ರತಾ ಕಾರ್ಯಕ್ರಮ ಹಾಗೂ ಸಾಲಕ್ಕೆ ಬಡ್ಡಿ ಪಾವತಿಗೆ ದೊಡ್ಡ ಮೊತ್ತದ ಹಣ ವಿನಿಯೋಗವಾಗುತ್ತಿದೆ. ಜತೆಗೆ ಮುಂದಿನ ಆರ್ಥಿಕ ವರ್ಷದಲ್ಲಿ 5 ಗ್ಯಾರಂಟಿಗಳಿಗೆ 58000 ಕೋಟಿ ರೂ. ಅಗತ್ಯವಿದೆ. ಹಾಗಾಗಿ ಬಜೆಟ್ ಗಾತ್ರ ಹೆಚ್ಚಾದರೂ ಇಲಾಖಾವಾರು ಅನುದಾನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ತೀರಾ ಕಡಿಮೆ. ಆಯ್ದ ಪ್ರಮುಖ ಶೇ.5ರಿಂದ 10ರಷ್ಟು ಅನುದಾನ ಹೆಚ್ಚಾಗಬಹುದು ಎಂದು ತಿಳಿಸಿವೆ.
#ಹೊಸ ಕೆಲಸಕ್ಕೆ 20- ಚಾಲ್ತಿಗೆ 80
ಕಳೆದ ಎರಡು ವರ್ಷಗಳಿಂದ ಬಜೆಟ್ ಘೋಷಣೆಯಿಲ್ಲದೆ, ಅನುದಾನದ ಖಾತರಿ ಇಲ್ಲದೆ ಹತ್ತಾರು ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು. ಇದರಿಂದ ದೊಡ್ಡ ಆರ್ಥಿಕ ಹೊರೆ ಬಿದ್ದಿದೆ. ಹಾಗಾಗಿ ಇನ್ನು ಕೆಲ ವರ್ಷ ತುರ್ತು ಕೆಲಸಗಳಿಗಷ್ಟೇ ಆದ್ಯತೆ ನೀಡುವುದು ಅನಿವಾರ್ಯ. ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲೇ ಇಲಾಖಾವಾರು ಅನುದಾನದಲ್ಲಿ ಚಾಲ್ತಿ ಕೆಲಸಗಳಿಗೆ ಶೇ.80ರಷ್ಟು ಬಳಸಬೇಕು. ಬಾಕಿ ಶೇ.20ರಷ್ಟು ಅನುದಾನವನ್ನಷ್ಟೇ ಹೊಸ ಪ್ರಸ್ತಾವಗಳಿಗೆ ಬಳಸುವಂತೆ ಸರಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲೇ ಸೂಚನೆ ನೀಡಲಾಗಿತ್ತು. ಆ ಮೂಲಕ ಚಾಲ್ತಿ ಕಾಮಗಾರಿಗಳಿಗೆ ಶೀಘ್ರ ಮುಕ್ತಿ ನೀಡುವ ಕಾರ್ಯ ನಡೆದಿದೆ ಎಂದು ಉನ್ನತ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.
#ಬಜೆಟ್ ಗಾತ್ರ 3.70 ಲಕ್ಷ ಕೋಟಿ?
ಮುಂದಿನ ಆರ್ಥಿಕ ವರ್ಷಕ್ಕೆ 3.70 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡನೆ ನಿರೀಕ್ಷೆ ಇದೆ. ಜಿಎಸ್ಟಿಪಿಯು ಮಾರ್ಚ್ ಅಂತ್ಯಕ್ಕೆ 28 ಲಕ್ಷ ಕೋಟಿ ರೂ.ಗೆ ತಲುಪುವ ಅಂದಾಜು ಇದ್ದು, ರಾಜ್ಯ ಸರಕಾರ ಪಡೆಯುವ ಸಾಲ ಮೊತ್ತ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ಗ್ಯಾರಂಟಿಗಳಿಗೆ 20,000 ಕೋಟಿ ರೂ. ಹೆಚ್ಚುವರಿ ಅಗತ್ಯವಿದೆ. ಹಾಗಾಗಿ ಹಣಕಾಸಿನ ಅಗತ್ಯವಿರುವ ಹೊಸ ಘೋಷಣೆ, ಭರವಸೆಗಳು ದೊಡ್ಡ ಪ್ರಮಾಣದಲ್ಲಿ ಘೋಷಣೆ ಸಾಧ್ಯತೆ ಕ್ಷೀಣ ಎಂದು ಗೊತ್ತಾಗಿದೆ.
Comments
Post a Comment